ಮಹಾಭಾರತ
ಮಹಾಭಾರತ
ಹೆಣಗಳ ಮುಂದೆ ನಿಂತು
ಗೋಳಿಡುವ ಸುಯೋಧನನ ನೆರಳು
ಕಾಡುತಿದೆ ಜಗವ ಕಪ್ಪೆಯ ಮೇಲಿನ ಸಪ್ಪದ ಛಾಯೆಯಂತೆ
ಮೈವೆತ್ತಿತಲ್ಲ ವಿಧಿಯೇ ನುಂಗುವ ಅವತಾರವಾಗಿ
ಸಾಲದೆಂದು ದುಶ್ಯಾಸನನ ರೂಪ ತಾಳಿ
ಮರುಳು ಪಾಂಡವರೆಲ್ಲರೆಂದು ಬಗೆದು
ಭುವನವನಾಕ್ರಮಿಸಿ ತಿಂದು ಜಗಿದು
ಲಸಿಕೆ ಹೊರಡುವ ಸೂಜಿ ಮೊನೆಯೂ
ತನ್ನದೆಂದು ಬಿಡದೆ ಮುನಿದು
ಅಟ್ಟಹಾಸಗೈದೆ ಶಾಸನಗಳ ಕೊಂದು
ಕವಡೆ ಮೇಲಿನ ಚುಕ್ಕೆ ಸಂಖ್ಯೆ
ಹೆಣೆದ ವಿಷದ ವ್ಯೂಹ ಚಿಂತೆ
ಪಗಡೆಯಾಟದ ದ್ಯೂತದೊಳಗೆ
ಬಿಕರಿಗಿದೆ ಪ್ರಾಣ, ಆತ್ಮ ಜೋಳಿಗೆ
ಅಮರ ಪ್ರೇಮ ಭವದ ಮೋಹ
ನುಚ್ಚು ನೂರು ವ್ಯಾಕರಣ ನೇಹ
ದಂದಶೂಕನಂತೆ ದ್ರೌಪದಿಯ ಸೆರಗು
ಹರಿದು ನುಂಗುತಿದೆ ಜಗದ ಸೊಬಗು
ಕಂಗೆಟ್ಟ ಮುಡಿಯ ಕೇಶದ ಬಲೆ
ವಿಸ್ಮಯ ಹೆಣೆದು ಪಡೆದ ಜೀವ ಕಲೆ
ಎಂದು ಬರುವ ಭೀಮ ನೊಂದು
ಕಾಯಬೇಕು ಎಲ್ಲಿಯವರೆಗೆ ಬೆಂದು
ಭೇದಿಸಲು ಹೊರಟ ಚಕ್ರವ್ಯೂಹ
ಸುಳಿಗೆ ಒಳಸುಳಿಯ ದ್ರೋಹ
ಬಗೆದು ಅಭಿಮನ್ಯುಗಳ ಆಹುತಿ ಪಡೆದು
ಕಾಲಾಗ್ನಿರುದ್ರನಂತೆ ಮೆರೆದು
ಮಹಿಪತಿಗಳ ಮೀರಿ ತುಳಿದು
ಮರುಕಳಿಸಿರಲ್ಲ ಚರಿತೆ ಯುಗಬರಹ ತೊಳೆದು
ಪ್ರೊ.ಚಂದ್ರಶೇಖರ ಹೆಗಡೆ
Super sir
ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಇರುವ ಮಹತ್ವವನ್ನು ಕೆಲವೇ ಶಬ್ದಗಳಲ್ಲಿ ಸುಂದರವಾಗಿ ಹೇಳಿರಾ ಸರ್…….
ಕೃತಜ್ಞತೆಗಳು